Slide
Slide
Slide
previous arrow
next arrow

ಮಾರಿ ಜಾತ್ರಾ ಮಹೋತ್ಸವ ಸಂಪನ್ನ: ಭಕ್ತಿಯಲ್ಲಿ ಮಿಂದೆದ್ದ ಭಕ್ತರು

300x250 AD

ಭಟ್ಕಳ: ಮಾರಿ ಮೂರ್ತಿಯನ್ನ ಗುರುವಾರ ಸಂಜೆ 10 ಸಾವಿರಕ್ಕೂ ಅಧಿಕ ಭಕ್ತರು ಮೆರವಣಿಗೆಯಲ್ಲಿ ಕೊಂಡೊಯ್ದು, ಜಾಲಿಕೋಡಿ ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಇಲ್ಲಿನ ವಾರ್ಷಿಕ ಮಾರಿ ಜಾತ್ರಾ ಮಹೋತ್ಸವ ಸುಸಂಪನ್ನಗೊಂಡಿತು.

ಬುಧವಾರದಂದು ಮಾರಿಕಾಂಬಾ ದೇವಸ್ಥಾನದ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡ ಮಾರಿಯಮ್ಮನಿಗೆ ಪೂಜೆ- ಪುನಸ್ಕಾರಗಳು ನಡೆದವು. ಗುರುವಾರ ಕೂಡ ಮುಂಜಾನೆಯಿಂದಲೇ ಮಾರಿಯಮ್ಮನ ದರ್ಶನಕ್ಕೆ ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕು, ಜಿಲ್ಲೆಯಿಂದ ಬಂದಂತಹ ಭಕ್ತರ ಸಾಲು ಕಿ.ಮೀ.ಗುಂಟ ನಿಂತಿತ್ತು. ದೇವಿಗೆ ಹಣ್ಣು- ಕಾಯಿ ಮಾಡಿಸಿ ಸಹಸ್ರಾರು ಭಕ್ತರು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಮುಂಜಾನೆ ದೇವಸ್ಥಾನಕ್ಕೆ ಮಾಜಿ ಶಾಸಕ ಮಂಕಾಳ ವೈದ್ಯ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಶಾಸಕ ಸುನೀಲ ನಾಯ್ಕ, ಆಡಳಿತ ಮಂಡಳಿ ಸದಸ್ಯರು, ಸ್ವಯಂ ಸೇವಕರು ಹಾಗೂ ಭಕ್ತರನ್ನೊಳಗೊಂಡAತೆ ಸಂಜೆ 4.30ರ ಸುಮಾರಿಗೆ ಮಹಾಮಂಗಳಾರತಿ ಪೂಜೆಯೊಂದಿಗೆ ವಿಸರ್ಜನಾ ಪೂಜೆ ನೆರವೇರಿಸಲಾಯಿತು. ಮಳೆಯ ಅಡ್ಡಿಯಿಲ್ಲದ ಹಿನ್ನೆಲೆ ಮಾರಿ ದೇವಿಯ ಮೂರ್ತಿಯನ್ನು ಗದ್ದುಗೆಯಿಂದ ದೇವಸ್ಥಾನದ ಹೊರಕ್ಕೆ ತಂದ ಭಕ್ತರು, ತಲೆ ಮೇಲೆ ಹೊತ್ತು ಜಯಘೋಷ ಕೂಗುತ್ತ ಮೆರವಣಿಗೆಯಲ್ಲಿ ಪೇಟೆ ಮುಖ್ಯ ರಸ್ತೆ ಮಾರ್ಗವಾಗಿ ಬಂದರ್ ರಸ್ತೆಯಿಂದ ಹನುಮಾನನಗರ, ಕರಿಕಲ್ ಮಾರ್ಗದಲ್ಲಿ ಸಾಗಿ ಬಂದು ಜಾಲಿ ಕೋಡಿ ಸಮುದ್ರ ತೀರದಲ್ಲಿ ವಿಸರ್ಜನೆ ಮಾಡಿದರು.

ಈ ವೇಳೆ ಮಾರಿ ಸಾಗಿ ಬಂದ ಹನುಮಾನನಗರದಿಂದ ಸಮುದ್ರದವರೆಗಿನ ಗ್ರಾಮಗಳ ಜನರು ರಸ್ತೆಯ ಪಕ್ಕದಲ್ಲಿ ಕೋಳಿ ಬಲಿ ನೀಡಿ, ರೋಗ- ರುಜಿನ ನಿರ್ಮೂಲನೆ ಮಾಡುವಂತೆ ಬೇಡಿಕೊಂಡು ದೇವಿಯ ಹೂವಿನ ಪ್ರಸಾದ ಸ್ವೀಕರಿಸಿದರು. ಸಂಜೆ 5.30ರ ವೇಳೆಗೆ ಸಮುದ್ರ ತೀರ ತಲುಪಿದ ಮಾರಿ ದೇವಿಗೆ ಸ್ವಯಂ ಸೇವಕರು ಹಾಗೂ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಮೂರ್ತಿಯ ಭಾಗಗಳನ್ನು ಬೇರ್ಪಡಿಸಿ ಸಮುದ್ರದಲ್ಲಿ ವಿಸರ್ಜಿಸಲಾಯಿತು. ಸಕಲ ವಿಧಿವಿಧಾನಗಳ ಮೂಲಕ ವಿಸರ್ಜಿಸುವದರೊಂದಿಗೆ ಮಾರಿ ಜಾತ್ರೆ ಸಂಪನ್ನಗೊಂಡಿತು.

300x250 AD

ಶಾಸಕ ಸುನೀಲ ನಾಯ್ಕ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ನರೇಂದ್ರ ನಾಯಕ, ಶ್ರೀಧರ ನಾಯ್ಕ, ಶ್ರೀಪಾದ ಕಂಚುಗಾರ, ನಾರಾಯಣ ಖಾರ್ವಿ ಮಾದೇವ ಮೊಗೇರ, ರಘುವೀರ ಬಾಳಗಿ, ರಾಮನಾಥ ಬಳಗಾರ, ದಿನೇಶ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ ನಾರಾಯಣ ಖಾರ್ವಿ ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದರಿನಾಥ, ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ನಗರ ಠಾಣೆ ಸಿಪಿಐ ದಿವಾಕರ ಹಾಗೂ ಗ್ರಾಮೀಣ ಠಾಣೆ ಸಿಪಿಐ ಮಹಾಬಲೇಶ್ವರ ನಾಯ್ಕ, ಪಿಎಸ್‌ಐ ಭರತ, ಪಿಎಸ್‌ಐ ಕುಡಗುಂಟಿ, ಪಿಎಸ್‌ಐ ಸುಮಾ ಹಾಗೂ ಇತರ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.

Share This
300x250 AD
300x250 AD
300x250 AD
Back to top